ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಶಿವರಾಮ ಕಾರಂತರ ಸಣ್ಣಕತೆಗಳ ಸಂಯುಕ್ತ ಸಂಕಲನಗಳಿವು. ಇದರಲ್ಲಿ, 9 ಕಥೆಗಳಿವೆ. ಹಾವು, ಚಕ್ರ ತಿರುಗಿತು, ಗೆಳೆಯರವರು, ಮುಕುಂದನ ಆಸೆ, ಸತ್ಯ ಸೋಮಪ್ಪನ ಸಾಹಸಗಳು, ಕೊಳ್ಳುವ ಕಾಲ ಬರಲು, ಶಾಂತಾರಾಮ, ನನ್ನಿಂದಾಗದು ಗಡಗುಂಟಿಯ ಗೆಳೆಯ ಇವು ಕತೆಗಳ ಶೀರ್ಷಿಕೆಗಳು. ಹಾವು ಸಂಕಲನದ ಬೆನ್ನುಡಿ ಬರೆದ ಲೇಖಕರು ‘ಇದು ನನ್ನ ಚಿಕ್ಕ ಕಥೆಗಳ ಎರಡನೆಯ ಗೊಂಚಲು. ಗೊಂಚಲಿಗೆ ಮೊದಲ ಕಥೆಯ ಹೆಸರನ್ನು ಕೊಟ್ಟಿರುವೆ ಹಾವು- ಎಂದು ಮಾನವ ಜೀವನದಲ್ಲಿ ತಾರುಣ್ಯವೇ ಪರಿವರ್ತನೆಯ ಕಾಲ. ತೀರ ಕೋಮಲ ಕಾಲವದು. ಈ ಕಾಲವು ಪಾಲನೆಯಿಂದ ಸಕ್ಕರೆಯಾಗಬಹುದು: ಆಲಸ್ಯದಿಂದ ಬೇವಾಗಬಹುದು. ಜೀವನ ಪ್ರವಾಹದ ಗತಿಯನ್ನು ಈ ಕಾಲದಲ್ಲಿ ತಿರುಗಿಸಿದರ, ಬೇಕಾದ ದಿಕ್ಕಿಗೆ ತಿರುಗಿಸಬಹುದು. ಆದರೆ ತಿರುಗಿಸುವವರು, ಯೋಗ್ಯ ಹಾದಿಗಳು ಹುಡುಕುವ ಮೊದಲು, ಕೆಡುಕಿನ ಹಾದಿ ಯಾವುದೆಂಬುದನ್ನಾದರೂ ತಿಳಿದಿರುವುದು ಅವಶ್ಯ’ ಎನ್ನುತ್ತಾರೆ. ಜೊತೆಗೆ ಹಾವು ಎಂಬುದು ಕಥೆಯೇ ಅಲ್ಲ. ಅದು ಕೇವಲ ಔಷಮಾನಿಕ ರಚನೆ. ಜೀವನದ ಉದ್ಗಮದಲ್ಲಿ ವಿಷವನ್ನು ಕಾರಿ ಸಂಸಾರವನ್ನು ಕೆಡಿಸುವ ದುರ್ನಡೆಗಳೇ ಈ ಹಾವುಗಳು. ಹಾವು ಎಂಬ ಕಥೆಯಲ್ಲಿನ ಹಾವು, ಯಾವ ಹಾವೂ ಆಗಬಹುದು. ವಿಷವನ್ನು ಕಾರುವ ಯಾವ ದುರ್ಗಣವೂ ಆಗಬಹುದು ಎನ್ನುತ್ತಾರೆ. ಕವಿಕರ್ಮ ಸಣ್ಣಕಥೆಯು ಕವಿತೆ ಬರೆಯುವುದರಿಂದ ಉಪಯೋಗವಿಲ್ಲ ಎಂಬ ಹತಾಶ ಕವಿಯ ಧೋರಣೆಯು ಈ ಕಥೆಯ ಕೇಂದ್ರವಾಗಿದೆ. ‘ಹಾವು’ ಕಥಾ ಸಂಕಲನವನ್ನು ಪುತ್ತೂರಿನಲ್ಲಿ ಶಿವರಾಮ ಕಾರಂತರೇ 1932 ರಲ್ಲಿ (ಪುಟ: 105) ಪ್ರಕಟಿಸಿದ್ದರು. ಈ ಕೃತಿ 2001ರಲ್ಲಿ ಎರಡನೇ ಮುದ್ರಣ, 2017ರಲ್ಲಿ ಮೂರನೇ ಮುದ್ರಣ ಹಾಗೂ 2019ರಲ್ಲಿ ನಾಲ್ಕನೇ ಮುದ್ರಣವನ್ನು ಕಂಡಿದೆ. ‘ಹಾವು ’ ಕಥೆಯು 01-03-1930ರಲ್ಲಿ ವಸಂತ ಪತ್ರಿಕೆಯಲ್ಲಿ ‘ನಮ್ಮ ‘ಹೂದೋಟ’ ಶೀರ್ಷಿಕೆಯಡಿ ಪ್ರಕಟವಾಗಿತ್ತು. ಕವಿಕರ್ಮ -ಸಣ್ಣ ಕಥೆಗಳ ಸಂಕಲನವು ಬೆಳಗಾವಿಯ ಒಂದಾಣೆ ಮಾಲೆಯಡಿ 1933ರಲ್ಲಿ (ಪುಟ: 19) ಪ್ರಕಟಗೊಂಡಿತ್ತು.











Reviews
There are no reviews yet.