ನಾಲ್ಕು ತಾಸು ಧರ್ಮದರ್ಶನದ ಸರದಿಯಲ್ಲಿ ನಿಂತ ಮೇಲೆ ದೇವರ ದರ್ಶನವಾಯ್ತು. ಗದ್ದಲದೊಳಗೆ ಮಗನಿಗೆ ದೇವರು ಕಾಣಿಸದೇ ಹೋಗಿಬಿಟ್ಟಾನೋ ಎಂದು ಅತ್ಯಂತ ಆತಂಕದಲ್ಲಿದ್ದ ರಮಾಬಾಯಿ ‘ಛಂದಾಗಿ ನೋಡು… ವಜ್ರದ ಕಿರೀಟ ನೋಡು… ಹೂವಿನ ಅಲಂಕಾರ ನೋಡು… ಎದೆ ಮೇಲಿರೋ ಕಂಠೀಹಾರ ನೋಡು… ಹಣೆಗೆ ಹಚ್ಚಿರೋ ನಾಮ ನೋಡು…’ ಎಂದು ಹೇಳುತ್ತಲೇ ಇದ್ದಳು. ಹುಲಿಕುಂಟಿ ಮಗನ ಬೋಡು ತಲೆಯನ್ನು ಸವರಿ ‘ಸಜ್ಜಿಗಿ ಉಂಡಿ’ ಎಂದು ತಮಾಷೆ ಮಾಡುತ್ತಲೇ ಇದ್ದ. ಗಂಡನ ಬೋಡು ತಲೆಯಲ್ಲಿ ಅಪರಿಚಿತ ಉಬ್ಬು-ತಗ್ಗುಗಳನ್ನು ಕಂಡು ರಮಾಬಾಯಿ ಅಚ್ಚರಿ ಪಡುತ್ತಿದ್ದಳು. ‘ಪೋವಂಡಿ… ಪೋವಂಡಿ…’ ಎನ್ನುವ ದಬ್ಬುವಿಕೆಯಲ್ಲಿಯೇ ದೇವರ ದರ್ಶನವಾಯ್ತು. ಹುಂಡಿಯ ಬಳಿಯೂ ಚಿಕ್ಕ ಸರದಿಯಿತ್ತು. ಭಕ್ತಾದಿಗಳು ತಮ್ಮ ತಮ್ಮ ಶಕ್ತಾನುಸಾರ ಕಾಣಿಕೆಯನ್ನು ಅರ್ಪಿಸುತ್ತಿದ್ದರು. ರಮಾಬಾಯಿ ಮಗನನ್ನು ಎತ್ತಿ ಸೀಳುಲೋಟವಿತ್ತು. ‘ಹಾಕು…’ ಎಂದು ಹುಲಿಕುಂಟಿ ಮಗನಿಗೆ ಅಪ್ಪಣೆ ಕೊಟ್ಟ. ಗುರುರಾಜ ಹಾಕಿದ. ದುಡ್ಡು, ಬಂಗಾರ, ಬೆಳ್ಳಿಯ ನಾಲಿಗೆ, ಕಣ್ಣು, ಮಗುವಿನ ಗೆಜ್ಜೆ, ಸೋಡಾಚೀಟಿಯ ಪತ್ರ, ಆಸ್ತಿಯ ಪತ್ರ, ಸತ್ತವರ ಬೂದಿಯ ಗಂಟು… ಹೀಗೆ ನೂರೆಂಟು ವಸ್ತುಗಳಿಂದ ತುಂಬಿ ತುಳುಕುತ್ತಿದ್ದ ಹುಂಡಿಯಲ್ಲಿ ಸೀಳುಲೋಟ ಸದ್ದಿಲ್ಲದೆ ಸೇರಿಕೊಂಡಿತು










Reviews
There are no reviews yet.