ಬಹುಮುಖ ಪ್ರತಿಭೆಯ ಕಾರಂತರು ವಿಜಯನಗರ ಇತಿಹಾಸದ ಒಂದು ಐತಿಹಾಸಿಕ ಘಟನೆಯನ್ನು ಆಧಾರವಾಗಿ ಇರಿಸಿಕೊಂಡು ಬರೆದಿರುವ ಕಲ್ಲು ಕರಗಲು ಕಲ್ಲೆದೆಯು? (ಮೇ ೧೯೨೮) ‘ವಸಂತ’ದಲ್ಲಿ ಪ್ರಕಟವಾಗಿದ್ದ ಕಾರಂತರ ಸಣ್ಣಕತೆ. ಅವರ ಸಣ್ಣಕತೆಗಳಲ್ಲಿ ಇದೇ ಮೊದಲ ಕತೆಯೆಂದು ನನ್ನ ಅನಿಸಿಕೆ. ‘ವಸಂತ’ ಪತ್ರಿಕೆಯ ಜೂನ್-ನವೆಂಬರ್ ೧೯೨೮ರ ಸಂಚಿಕೆಯಲ್ಲಿ ‘ಪಶುಬಲ’ ಎಂಬ ಬಾಹ್ಯಾಕಾಶಯಾನಕ್ಕೆ ಸಂಬಂಧಿಸಿದಂತೆ ವೈಜ್ಞಾನಿಕ ಸಾಹಸಮಯ ಕಾಲ್ಪನಿಕ ಕತೆ ಪ್ರಕಟವಾಗಿದೆ. ‘ರಂಗಪ್ಪನ ಗೊಂಬೆ’ ಎಂಬ ಕಿರುಗತೆ (ಕೆನರಾ ಬ್ರದರ್ ಹುಡ್ ಜರ್ನಲ್, ಜುಲೈ ೧೯೩೮) ಕಾರಂತರು ಅತ್ಯಂತ ಯಶಸ್ವೀ ಸಣ್ಣಕಥಾ ಲೇಖಕರು ಎಂಬುದನ್ನು ಶ್ರುತಪಡಿಸುವ ಸಣ್ಣಕತೆ. ‘ಟಬನೌರನ ಸಾಹಸ (೧೯೫೧) ಪತ್ರಿಕಾ ವರದಿಯನ್ನು ಆಧರಿಸಿ ಕಥಾರೂಪದಲ್ಲಿ ಹೆಣೆದಿರುವ ಬರಹ. ‘ಪ್ರೀತಿ ವಿಶ್ವಾಸಗಳ ನಂದಾದೀಪ’ (೧೯೫೯) ವರದಕ್ಷಿಣಾ ಶುಲ್ಕ ವಿರೋಧೀ ಕಥಾನಕ. ‘ನವದಂಪತಿಗಳು ಹಂಗಿನ ಬಳುವಳಿ (ವರದಕ್ಷಿಣೆ) ಬಿಟ್ಟು ಅನ್ನೋನ್ಯ ಪ್ರೀತಿ ವಿಶ್ವಾಸದ ನಂದಾದೀಪ ಬೆಳಗಿಸಿದರು” ಎಂಬ ವಾಕ್ಯದೊಂದಿಗೆ ಈ ಕತೆ ಮುಗಿಯುತ್ತದೆ. ಇವಿಷ್ಟು ಬಿಡಿರೂಪದಲ್ಲಿ ನನಗೆ ಲಭ್ಯವಾಗಿರುವ ಕಾರಂತರ ಸಣ್ಣಕತೆಗಳು.











Reviews
There are no reviews yet.