ಅಮರೇಶ ಗಿಣಿವಾರ ಅವರ ಎರಡನೆಯ ಕತಾಸಂಕಲನ ಬಾಂಗ್ಲಾದ ಹಕ್ಕಿಗಳು. ಈ ‘ಬಾಂಗ್ಲಾದ ಹಕ್ಕಿಗಳು’ ಕೃತಿಯಲ್ಲಿ ಒಟ್ಟು ಎಂಟು ಕಥೆಗಳಿವೆ. ವಸ್ತುವಿನಿಂದ ದೃಶ್ಟಿಯಿಂದ ಒಂದೊಂದು ಭಿನ್ನವಾಗಿವೆ. ಅವುಗಳ ನಿರೂಪಣೆಯ ಭಾಶೆಯೂ ಒಂದಕ್ಕಿಂತ ಒಂದು ಭಿನ್ನವಾಗಿವೆ. ಕನ್ನಡದ ವಿವಿಧ ಒಳನುಡಿಗಳನ್ನು ನಿರೂಪಣೆಯಲ್ಲಿ ಹದವಾಗಿ ಬಳಸಿಕೊಂಡಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಕತೆಗಳು ಬಹಳ ಸರಾಗವಾಗಿ ಓದಿಸಿಕೊಳ್ಳುತ್ತವೆ. ವಸ್ತುವಿನ ತೆಳುವಾದ ನೆಲೆಯಲ್ಲಿ ಬಹಳ ಅಚ್ಚುಕಟ್ಟಾಗಿ ಕತೆಗಳನ್ನು ಹೇಳುವ ಕ್ರಮ ಬಹಳ ಮುಖ್ಯವಾದುದು. ‘ಬಾಂಗ್ಲಾದ ಹಕ್ಕಿಗಳು’ ಎಂಬ ಕತೆ ಬಾಂಗ್ಲಾದ ವಲಸಿಗರ ಸಮಸ್ಯೆ ಮತ್ತು ಪೌರತ್ವ ಕಾಯ್ದೆಯ ಅಪಾಯಗಳನ್ನು ಚಿತ್ರಿಸುವ ಕತೆ. ‘ಹಸಿಬೆ’ಯು ಬಂಡವಾಳಶಾಹಿಯ ಕ್ರೌರ್ಯ ಮತ್ತು ಹಸಿವಿನ ಕರಾಳ ರೂಪವನ್ನು ಮುಖಮುಖಿಯಾಗಿಸಿರುವ ಕತೆ. ‘ಸಣ್ಣಜಾಗ’ ಎಂಬುದು ಊರಗೌಡಿಕೆಯನ್ನು ನಡೆಸುವ ಭೂಮಾಲಿಕರ ಹಿಂಸೆಯ ಮುಖವನ್ನು ವರ್ಣಿಸುವ ಕತೆ. ‘ಸುರುಳಿ’ ಎಂಬ ಕತೆ ಸತ್ಯವನ್ನು ಪ್ರಮಾಣಿಸಲಾಗದ ಕಾನೂನು ಮತ್ತು ಪೋಲಿಸು ವ್ಯವಸ್ಥೆಯ ಕ್ರೌರ್ಯವನ್ನು ಚಿತ್ರಿಸುತ್ತದೆ. ಹೀಗೆ ಒಂದೊಂದು ಕತೆಯೂ ಇಂದಿನ ಸಮಾಜ ಎದುರಿಸುತ್ತಿರುವ ಬಿಕ್ಕಟ್ಟುಗಳನ್ನು ಚಿತ್ರಿಸುತ್ತವೆ. ಈ ದೃಶ್ಟಿಯಿಂದ ನೋಡಿದಾಗ ಕತೆಗಳ ನಿರೂಪಕ ಮನಸ್ಸು ಲೋಕದ ಹಿಂಸೆಯನ್ನು ಕಂಡು ತಲ್ಲಣಿಸಿ ಅದನ್ನು ಕಥನವಾಗಿಸುವ ಮೂಲಕ ಲೋಕಸಂವಾದ ಮಾಡುತ್ತದೆ. ಓದುಗರನ್ನೂ ಲೋಕದ ಜೊತೆಗೆ ಸಂವಾದಿಸುವಂತೆ ಪ್ರೇರೇಪಿಸುತ್ತವೆ. ಅಲ್ಲದೆ ಕನ್ನಡ ಸಾಹಿತ್ಯದಲ್ಲಿ ಹೊಸಬೆಳೆ ಬರುತ್ತಿರುವುದನ್ನು ನಿಚ್ಚಳವಾಗಿ ಎತ್ತಿತೋರಿಸುತ್ತವೆ.











Reviews
There are no reviews yet.